ಕಿರಣ್ ಬೇಡಿ (ಜೂನ್ ೯, ೧೯೪೯) ಭಾರತದಲ್ಲಿ ಪೊಲೀಸ್ ಅಧಿಕಾರಿಯಾಗಿ ಹಾಗೂ ಸಾರ್ವಜನಿಕ ಸೇವಕರಾಗಿ ಪ್ರಸಿದ್ಧಿ ಪಡೆದವರಾಗಿದ್ದಾರೆ. ಭಾರತದಲ್ಲಿ ಪೋಲೀಸ್ ಸೇವೆ ಸೇರಿದ ಮೊದಲ ಭಾರತೀಯ ಮಹಿಳೆ ಕಿರಣ್ ಬೇಡಿ. == ಜನನ, ಜೀವನ == ಕಿರಣ್ ಬೇಡಿ ಪಂಜಾಬ್‌ನ ಅಮೃತಸರದಲ್ಲಿ ೧೯೪೯ರ ಜೂನ್ ೯ರಂದು ಜನಿಸಿದರು. ಪಂಜಾಬ್ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ, ಕಾನೂನು ಹಾಗೂ ಡಾಕ್ಟರೇಟ್ ಪದವಿ ಪಡೆದ ಕಿರಣ್ ಬೇಡಿ ರಾಜ್ಯಶಾಸ್ತ್ರದ ಉಪನ್ಯಾಸಕರಾಗಿ ವೃತ್ತಿ ಆರಂಭಿಸಿದರು. ಅನಂತರ ಪೊಲೀಸ್ ಅಧಿಕಾರಿಯಾದರು. == ಪೊಲೀಸ್ ಸೇವೆಯಲ್ಲಿ == ಕಿರಣ್ ಬೇಡಿ ಅವರು ಪೊಲೀಸ್ ವೃತ್ತಿಯಲ್ಲಿ ಎದುರಿಸಿರುವ ಸವಾಲುಗಳಂತೆ ಗಳಿಸಿರುವ ಯಶಸ್ಸು ಹಾಗೂ ಜನಪ್ರಿಯತೆ ಕೂಡಾ ಅಪಾರ. ಗಣ್ಯವ್ಯಕ್ತಿಗಳ ಭದ್ರತೆ, ಸಂಚಾರ ಸಮಸ್ಯೆಗಳ ನಿವಾರಣೆ, ಮಾದಕವಸ್ತು ಚಟುವಟಿಕೆಗಳ ನಿಯಂತ್ರಣ ಮುಂತಾದ ಹಲವು ರೀತಿಯ ಸವಾಲು ಗಳನ್ನು; ರಾಜಕೀಯ ಒತ್ತಡಗಳನ್ನು, ಸಾಮರ್ಥ್ಯ ತೋರಿದಾಗಲೆಲ್ಲಾ ನಿಷ್ಕ್ರಿಯರನ್ನಾಗಿಸುವಂತಹ ರಾಕ್ಷಸೀಯ ಭಯ ಹುಟ್ಟಿಸುವ ವ್ಯವಸ್ಥೆಗಳನ್ನು; ಹೀಗೆ ಯಾವುದಕ್ಕೂ ಅಂಜದೆ, ಅಳುಕದೆ ಧೈರ್ಯವಾಗಿ ಎದುರಿಸಿ ಕಿರಣ್ ಬೇಡಿ ಅವರು ತೋರಿದ ಸಾಮರ್ಥ್ಯ ಅಸಾಧಾರಣವಾದದ್ದು. ಎಲ್ಲ ರೀತಿಯ ಕುಖ್ಯಾತಿಗಳಿಗೆ ಪ್ರಖ್ಯಾತವಾಗಿದ್ದ ತಿಹಾರ್ ಜೈಲಿನಲ್ಲಿ ಇವರು ಕೈಗೊಂಡ ಸುಧಾರಣೆಗಳು ಮಹತ್ವದ್ದೆನಿಸಿವೆ. == ವಿಶ್ವಸಂಸ್ಥೆಯಲ್ಲಿ == ಕಿರಣ್ ಬೇಡಿ ವಿಶ್ವಸಂಸ್ಥೆ ಯ ಶಾಂತಿಪಾಲನಾ ವಿಭಾಗದ ಸಲಹೆಗಾರರಾಗಿ ಸಹಾ ಕೆಲಸ ನಿರ್ವಹಿಸಿದ್ದಾರೆ. ಅಲ್ಲಿ ಕೂಡಾ ಇವರ ಸೇವೆಗೆ ಮೆಚ್ಚುಗೆಯಾಗಿ ವಿಶ್ವಸಂಸ್ಥೆ ಪದಕ ನೀಡಿ ಗೌರವಿಸಿದೆ. ಕಿರಣ್ ಬೇಡಿ ಅವರಿಗೆ ಸಂದಿತವಾಗಿರುವ ಅಂತರ ರಾಷ್ಟ್ರೀಯ ಪ್ರಶಸ್ತಿಯಾದ ರಾಮನ್ ಮ್ಯಾಗ್ಸೇಸೆ ಪುರಸ್ಕಾರ ಅಂತರರಾಷ್ಟ್ರೀಯ ಮಟ್ಟದಲ್ಲಿ ಅವರ ಕೀರ್ತಿ ಜ್ಯೋತಿಯಾಗಿ ಬೆಳಗಿರುವ ಕುರುಹಾಗಿದೆ. == ಸಮಾಜ ಸೇವೆಯಲ್ಲಿ == ಹಲವಾರು ಸಮಾಜದ ಉಪಯೋಗಿ ವ್ಯವಸ್ಥೆಗಳಿಗೆ ನಿರಂತರ ಬೆನ್ನೆಲುಬಾಗಿರುವವರು ಕಿರಣ್ ಬೇಡಿ. ಅಣ್ಣಾ ಹಜಾರೆ ಅವರು ಆರಂಭಿಸಿದ್ದ ಭ್ರಷ್ಟಾಚಾರ ವಿರುದ್ಧದ ಚಳುವಳಿಯಲ್ಲಿ ಸಹಿತ ಕಿರಣ್ ಬೇಡಿ ಸಕ್ರಿಯರಾಗಿದ್ದರು. == ರಾಜಕೀಯ ಕ್ಷೇತ್ರ == ೨೦೧೫ರ ದೆಹಲಿ ಅಸೆಂಬ್ಲಿ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. == ಪ್ರಶಸ್ತಿ, ಗೌರವ, ಪುರಸ್ಕಾರಗಳು == ವಿಶ್ವಸಂಸ್ಥೆ ಪದಕ ಅಂತರ ರಾಷ್ಟ್ರೀಯ ಪ್ರಶಸ್ತಿಯಾದ ರಾಮನ್ ಮ್ಯಾಗ್ಸೇಸೆ ಪುರಸ್ಕಾರ == ಉಲ್ಲೇಖಗಳು ==